ಜಿ.ಎಸ್. ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ ಎಂದು ಯಾಕೆ ಕರೆಯುತ್ತಾರೆ?

SANTOSH KULKARNI
By -
0

 

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಮ್ಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲಿ.

ಎಂದೆಂದಿಗೂ ಸತ್ಯವಾದ ಸಾಲುಗಳಲ್ಲವೆ ಇವು?

ರಾಷ್ಡ್ರಕವಿ ಜಿ.ಎಸ್.ಎಸ್ ಅವರ ಈ ಕವನಕ್ಕೆ ಸಂಗೀತ ಮತ್ತು ಕಂಠ ಕೊಟ್ಟು ಜೀವ ತುಂಬಿದ್ದು ಸಿ ಅಶ್ವತ್ ಅವರು.

ಈ ಕವನವನ್ನ ಇನ್ನೊಮ್ಮೆ ಗಮನವಿಟ್ಟು ಓದಿ ನೋಡಿ. ಓದುತ್ತ ಹಾಗೆ ಜೀವನವನ್ನೊಮ್ಮೆ ನೆನೆಸಿಕೊಳ್ಳಿ.
ಖಂಡಿತವಾಗಿ ಕಣ್ಣು ತೇವವಾಗುತ್ತದೆ.

ಕೆಲವೇ ಸಾಲುಗಳಲ್ಲಿ ಸತ್ಯವನ್ನ ಬಿಚ್ಚಿಟ್ಟ ಈ ಹಾಡಿಗೆ ಸರಿಸಾಟಿ ಇದೆಯೆ?

ಹಾಗೆಯೇ ಇನ್ನೊಂದು ಹಾಡು…

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ

  • ಇಂತಹ ಅದೆಷ್ಟೋ ಬರವಣಿಗೆಯಿಂದ ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ಜಿ.ಎಸ್.ಎಸ್ ಅವರಿಗೆ ರಾಷ್ಟ್ರಕವಿಯ ಪಟ್ಟ ಕಟ್ಟಿದ್ದು ನನ್ನ ಪ್ರಕಾರ ತುಂಬಾ ಕಡಿಮೆ.
  • ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರಿಗೆ ಕರ್ನಾಟಕ ಸರಕಾರವು 2006 ರಲ್ಲಿ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.

ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 7–02-1926 ರಲ್ಲಿ ಜನಿಸಿದರು.

ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ದುಡಿಯಲಾರಂಭಿಸಿದರು.

ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ತಿಲಾಂಜಲಿಯಿಟ್ಟು ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿದರು.

  • ಬಹುಮುಖ ಪ್ರತಿಭೆಯ ಇವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಮತ್ತು ಶ್ರೇಷ್ಠ ಬರಹಗಾರರೂ ಆಗಿದ್ದರು.
  • ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ 23–12-2013 ರಲ್ಲಿ ದೈವಾಧೀನರಾದರು.

ಅವರ ಕೆಲವು ಬರಹಗಳು.

  • ವಿಮರ್ಶೆಯ ಪೂರ್ವಪಶ್ಚಿಮ.
  • ಸೌಂದರ್ಯ ತಿಬಿಂಬ.
  • ಕನ್ನಡ ಕವಿಗಳ ಕಾವ್ಯ ಕಲ್ಪನೆ
  • ಮಾಸ್ಕೊದಲ್ಲಿ ೨೨ ದಿನ
  • ಗಂಗೆಯ ಶಿಖರಗಳಲ್ಲಿ,
  • ಅಮೇರಿಕದಲ್ಲಿ ಕನ್ನಡಿಗ
  • ಇಂಗ್ಲೆಂಡಿನಲ್ಲಿ ಚತುರ್ಮಾಸ.
  • ಸಾಮಗಾನ
  • ಚೆಲುವು-ಒಲವು
  • ದೇವಶಿಲ್ಪ
  • ದೀಪದ ಹೆಜ್ಜೆ
  • ಕಾರ್ತೀಕ
  • ತೀರ್ಥವಾಣಿ
  • ಅನಾವರಣ
  • ನನ್ನ ನಿನ್ನ ನಡುವೆ
  • ವ್ಯಕ್ತ-ಮಧ್ಯ

ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಗಣಿತ ಸೇವೆಗೆ ಕರ್ನಾಟಕ ಸರಕಾರವು ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕದ ಅತ್ಯುನ್ನತ ಗೌರವವಾದ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.

ರಾಷ್ಟ್ರಕವಿ ಪ್ರಶಸ್ತಿಯ ಬಗ್ಗೆ ಸಾಕಷ್ಟು ವಾದ ಪ್ರತಿವಾದಗಳು ಇವೆ.

  • ಈ ಪ್ರಶಸ್ತಿಯನ್ನ ಕರ್ನಾಟಕ ಸರಕಾರ ಕೊಡುತ್ತಿದೆಯಾದರೂ, ಇದನ್ನ ಮೊದಲು ಪ್ರಾರಂಭಿಸಿದ್ದು ಮದರಾಸು ಸರಕಾರ.
  • 1949ರ ಮಾರ್ಚ್ 22 ರಂದು ಮದರಾಸು ಸರಕಾರವು 5 ಭಾರತೀಯ ಭಾಷೆಗಳ ಕವಿಗಳನ್ನ 'ರಾಷ್ಟ್ರಕವಿ' ಎಂದು ಘೋಷಿಸಿತು.
  • ಅವರುಗಳಲ್ಲಿ ಕನ್ನಡದ ಎಂ.ಗೋವಿಂದ ಪೈ ಕೂಡಾ ಒಬ್ಬರಾಗಿದ್ದರು.
  • ಅನಂತರ ಕರ್ನಾಟಕ ಸರಕಾರವು ಇನ್ನಿಬ್ಬರು ಕನ್ನಡದ ಕವಿಗಳಾದ ಕುವೆಂಪು ಮತ್ತು ಡಾ.ಜಿ.ಎಸ್.ಶಿವರುದ್ರಪ್ಪ ಅವರನ್ನ ರಾಷ್ಟ್ರಕವಿಗಳೆಂದು ಘೋಷಿಸಿತು.

Post a Comment

0Comments

Post a Comment (0)