Saturday, September 26, 2020

ಮಂಕುತಿಮ್ಮನ ಕಗ್ಗ -1

 ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ | ದೇವ ಸರ್ವೇಶ ಪರಬೊಮ್ಮನೆಂದು ಜನಂ || ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ | ಆ ವಿಚಿತ್ರಕೆ ನಮಿಸೊ-ಮಂಕುತಿಮ್ಮ ||

ಪದಗಳ ವಿಸ್ತರಣೆ

ವಿಶ್ವಾದಿಮೂಲ=ವಿಶ್ವ+ಆದಿಮೂಲ, ಕಾಣದೊಡಮಳ್ತಿಯಿಂ=ಕಾಣದೊಡಂ+ಅಳ್ತಿಯಿಂ.

ಪದಗಳ ತಾತ್ಪರ್ಯ

ಪರಬೊಮ್ಮ=ಪರಬ್ರಹ್ಮ, ಕಾಣದೊಡಂ=ಕಾಣದಿದ್ದರೂ, ಅಳ್ತಿಯಿಂ=ಪ್ರೀತಿಯಿಂದ.

ಪದ್ಯದ ಪೂರ್ತಿ ವಿವರಣೆ

ಶ್ರೀವಿಷ್ಣು, ವಿಶ್ವಕ್ಕೆ ಮೂಲ, ಮಾಯಾಲೋಲ, ದೇವ, ಸರ್ವಕ್ಕೂ ಒಡೆಯನಾದ ಪರಬ್ರಹ್ಮ ಎಂದು ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವೆಲ್ಲಾ ಆತ್ಮಗಳಾದರೆ ನಮ್ಮನ್ನು ಆಳುವವನು ಪರಮಾತ್ಮ. ಅದನ್ನು ನಿಯಾಮಕ, ನಿಯಂತ್ರಕ, ದೇವರು ಎಂದೆಲ್ಲ ಕರೆಯುತ್ತಾರೆ. ಯಾರು ಏನೇ ಹೆಸರಿಟ್ಟು ಕರೆದರೂ ಅದು ಪರಮ ಶಕ್ತಿ. ಇಡೀ ಜಗತ್ತನ್ನು ಸೃಷ್ಟಿಸಿ ನಿಯಂತ್ರಿಸುವ ಒಂದು ಪರಮ ಶಕ್ತಿ. ಇದನ್ನು ಹಲವಾರು ಸದ್ಭಕ್ತರು ತಮ್ಮ ತಮ್ಮದೇ ರೀತಿಯಲ್ಲಿ ತಮ್ಮ ಅಂತರಂಗದಲ್ಲಿ ಕಂಡುಕೊಂಡು ಅನುಭವಿಸಿದ್ದಾರೆ. ಯಾರು ಹೇಗೆ ಅನುಭವಿಸಿದರೋ ಅವರಿಗೆ ಹಾಗೆ ಕಂಡಿದೆ. ನಾವಿರುವ ಭೂಮಿಯಂತಹ 9.80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ. ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಮುಕ್ತಕದ ಆಂತರ್ಯ. ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು, ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ, ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. ಅದನ್ನು ಕಂಡವರಿಲ್ಲ. ಅದರ ಲೀಲೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾದಂತಹ ಒಂದು ಪರಮ ವಸ್ತು. ಮಾನ್ಯ ಗುಂಡಪ್ಪನವರು ಅದನ್ನು "ವಿಚಿತ್ರ" ಎಂದು ಕರೆದು ಅದಕ್ಕೆ ನಮಿಸು ಎಂದು ಒಂದು ಆದೇಶವನ್ನು ಕೊಟ್ಟಿದ್ದಾರೆ. ನಾವೂ ಸಹ ನಮ್ಮ ನಮ್ಮ ಮನಸ್ಸುಗಳಲ್ಲಿ ನಮ್ಮದೇ ರೀತಿಯಲ್ಲಿ ಆ ಪರಮಾತ್ಮನೆಂಬ ವಸ್ತುವನ್ನು ಭಾವಿಸಿ ಅನುಭವಿಸಬೇಕು. ಹೃದಯದಲ್ಲಿ ತುಂಬಿಕೊಳ್ಳಬೇಕು.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...